ಮಂಗಳೂರು: ಶಕ್ತಿ ನಗರದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಕ್ಯಾಷಿಯರ್ ಪ್ರೀತೇಶ್ ಎಂಬಾತ ಸುಮಾರು 26 ಗ್ರಾಹಕರ 6.5 ಕೆಜಿ ಚಿನ್ನವನ್ನು ಅಡವಿಟ್ಟು, ಬೇರೆ ಸಹಕಾರಿ ಬ್ಯಾಂಕ್ ನಿಂದ ಬರೋಬ್ಬರಿ 3.5 ಕೋಟಿ ರೂಪಾಯಿ ಸಾಲ ಪಡೆದಿರುವ ವಿಚಾರ ಬಹಿರಂಗವಾಗಿದೆ.

ಶಕ್ತಿ ನಗರದ ಶಾಖೆಯಲ್ಲಿ ಕ್ಯಾಷಿಯರ್ ಆಗಿದ್ದ ಪ್ರೀತೇಶ್, ಜೂನ್ 12ರಂದು ಮತ್ತೊಂದು ಶಾಖೆಗೆ ವರ್ಗಾವಣೆಗೊಂಡಿದ್ದ. ಆದರೆ ನಿಗದಿತ ದಿನಕ್ಕೆ ಕರ್ತವ್ಯಕ್ಕೆ ಹಾಜರಾಗದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಣ್ಮರೆಯಾಗಿದ್ದಾನೆ. ಹೀಗಾಗಿ ಬ್ಯಾಂಕ್ ಅಧಿಕಾರಿಗಳಿಗೆ ಶಂಕೆ ಬಂದ ಹಿನ್ನಲೆಯಲ್ಲಿ ನಡೆದ ಆಂತರಿಕ ಪರಿಶೀಲನೆಯಲ್ಲಿ 6.5 ಕೆಜಿ ಚಿನ್ನ ಕಳವಾಗಿರೋದು ಬೆಳಕಿಗೆ ಬಂದಿದೆ. ಈ ಚಿನ್ನದಲ್ಲಿ 2.3 ಕೆಜಿ ಚಿನ್ನವನ್ನು ಸ್ಥಳೀಯ ಇನ್ನೊಂದು ಸಹಕಾರಿ ಬ್ಯಾಂಕ್ನಲ್ಲಿ ಅಡವಿಟ್ಟು, 3.5 ಕೋಟಿ ರೂಪಾಯಿ ಮೊತ್ತದ ಸಾಲವನ್ನು ಪಡೆದಿರುವುದು ಬಹಿರಂಗವಾಗಿದೆ. ಈ ಹಣವನ್ನು ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಪ್ರವಾಸ, ಶೋಕಿ ಜೀವನಕ್ಕಾಗಿ ಖರ್ಚುಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ತನಿಖೆಯ ಭೀತಿಯಿಂದ ಪ್ರೀತೇಶ್ ಮಂಗಳೂರಿಗೆ ಮರಳಿ, ತನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಕಂಕನಾಡಿ ಪೊಲೀಸ್ ಠಾಣೆ ಪೊಲೀಸರು ಪ್ರೀತೇಶ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪ್ರೀತೇಶ್ ಗೆ ಸಹಕಾರ ನೀಡಿದ್ದ ಶೇಖ್ ಮಹಮ್ಮದ್ ಎಂಬಾತನನ್ನೂ ಬಂಧಿಸಲಾಗಿದೆ. ಈ ಶಾಖೆಯಲ್ಲಿ 2000ಕ್ಕಿಂತ ಹೆಚ್ಚು ಗ್ರಾಹಕರು ಇದ್ದು, ಈ ಘಟನೆ ಸಹಕಾರಿ ಬ್ಯಾಂಕ್ ಗಳ ಮೇಲಿನ ನಂಬಿಕೆಗೆ ಗಂಭೀರ ಪೆಟ್ಟು ನೀಡಿದೆ.