ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ಹೊಂಡಗಳನ್ನು ಮುಚ್ಚದೇ ಇರುವ ಬಗ್ಗೆ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಗರಂ ಆಗಿದ್ದು, ನಗರಸಭಾ ಕಮಿಷನರ್ ವಿದ್ಯಾ ಅವರಿಗೆ ಫೋನ್ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೂರು ದಿನಗಳಿಂದ ಪದೇಪದೇ ಸೂಚನೆ ನೀಡಿದರೂ ಪ್ಯಾಚ್ ವರ್ಕ್ ಕೆಲಸ ನಡೆಯದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ರೈ, ರೋಡ್ ಪ್ಯಾಚ್ ವರ್ಕ್ ಮಾಡಿ ಎಂದು ಎಷ್ಟು ಸಲ ಹೇಳಬೇಕು? ನಾನು ಹೇಳೋ ಭಾಷೆ ನಿಮಗೆ ಅರ್ಥವಾಗುತ್ತೋ ಇಲ್ಲವೇ?” ಎಂದು ಪ್ರಶ್ನಿಸಿದ್ದಾರೆ. ಕಮಿಷನರ್ ಅವರನ್ನು ಗದರಿಸಿದ ಶಾಸಕ,
“ಎಲ್ಲದಕ್ಕೂ ಇಂಜಿನಿಯರ್ ಅಂತಾ ಹೇಳಿದ್ರೆ ನೀವು ಯಾಕೆ ಕಮಿಷನರ್ ಆಗಿ ಇರುವುದು? ಯಾವನೋ ಅವನು ಇಂಜಿನಿಯರ್—ತಲೆ ಕೆಟ್ಟಿದ್ಯಾ ಅವನಿಗೆ? ನಾಳೆ ಕೆಲಸ ಆಗದೇ ಇದ್ದರೆ ಮತ್ತೆ ಏನು ಮಾಡುತ್ತೇನೆ ನೋಡ್ತೀರಾ!” ಎಂದು ಎಚ್ಚರಿಕೆ ನೀಡಿದ್ದಾರೆ.

ಈ ರಸ್ತೆಯಲ್ಲಿ ಜನ ಸಾಯುತ್ತಿದ್ದಾರೆ. ನಾನು ಈಗ ಅದೇ ರಸ್ತೆಯಲ್ಲಿ ಹೋಗುತ್ತಿದ್ದೇನೆ, ಎಲ್ಲಿ ಕೆಲಸ ನಡೆಯುತ್ತಿದೆ? ನೀವು ಕಮಿಷನರಾ? ಎಲ್ಲಕ್ಕು ಕೆಳದರ್ಜೆ ಅಧಿಕಾರಿಗಳತ್ತ ಕೈ ತೋರಿಸ್ತೀರಾ?” ಎಂದು ಶಾಸಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡೋಂಟ್ ಟೇಕ್ ಇಟ್ ಲೈಟ್ಲಿ! ಮುಂದಿನ ಮಳೆಗಾಲದವರೆಗೂ ಹೀಗೆ ಕಾಲ ಕಳೆಯುವುದೇ?” ಎಂದು ಫುಲ್ ವಾರ್ನಿಂಗ್ ನೀಡಿದ ಶಾಸಕ ರೈ, ರಸ್ತೆ ಹೊಂಡಗಳನ್ನು ತಕ್ಷಣ ಮುಚ್ಚುವಂತೆ ಕಮಿಷನರ್ಗೆ ನಿರ್ದೇಶನ ನೀಡಿದ್ದಾರೆ.















