ಪುತ್ತೂರು: ಪುತ್ತೂರಿನಲ್ಲಿ ಭಾರೀ ಚರ್ಚೆಗೆ ಕಾರಣವಾದ ಲವ್ ಸೆಕ್ಸ್ ದೋಖಾ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪ್ರಕರಣದ ಆರೋಪಿ ಯುವಕ ಕೃಷ್ಣ ಜೆ.ರಾವ್ ಜೊತೆಗೆ ಆತನ ತಂದೆ, ಸ್ಥಳೀಯ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ರನ್ನು ಕೂಡ ಪುತ್ತೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣ ಜೆ.ರಾವ್ ಅನ್ನು ಇಂದು ಬೆಳಿಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಈತನ ಬಂಧನದ ಬೆನ್ನಲ್ಲೇ ಮಗನನ್ನು ತಪ್ಪಿಸಿಕೊಳ್ಳಲು ಸಹಕರಿಸಿದ್ದ ತಂದೆ ಜಗನ್ನಿವಾಸ್ ರಾವ್ ಕೂಡ ಬಂಧನಕ್ಕೆ ಒಳಗಾಗಿದ್ದಾರೆ. ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಕೃಷ್ಣ ಜೆ.ರಾವ್ ವಿರುದ್ಧ ಲವ್ ಸೆಕ್ಸ್ ದೋಖಾ ಸಂಬಂಧಿತ ಆರೋಪಗಳಿದ್ದವು. ಪ್ರಕರಣ ದಾಖಲಾದ ಕ್ಷಣದಿಂದಲೇ ಆತ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ಬಂಧಿಸಲು ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಬಂಧಿತರಿಬ್ಬರನ್ನೂ ಮುಂದಿನ ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಲಿದೆ.