ಮಂಗಳೂರು: ಮಂಗಳೂರಿನಲ್ಲಿ ಸಾರಿಗೆ ಇಲಾಖೆಯ ನೂತನ ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥಗಳ ಕೇಂದ್ರವನ್ನು ಇಂದು ಉದ್ಘಾಟಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮುಡಿಪು ಗ್ರಾಮದ ಪಥವನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅಧಿಕೃತವಾಗಿ ಉದ್ಘಾಟಿಸಿದರು.

ಈ ಉದ್ಘಾಟನಾ ಸಮಾರಂಭದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್, ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಹಾಗೂ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಈ ನೂತನ ತಂತ್ರಜ್ಞಾನಾಧಾರಿತ ಡ್ರೈವಿಂಗ್ ಪರೀಕ್ಷಾ ಕೇಂದ್ರದ ಮೂಲಕ ಇನ್ಮುಂದೆ ಮಂಗಳೂರಿನಲ್ಲಿ ಆಧುನಿಕ ವಿಧಾನದಲ್ಲಿ ಚಾಲನಾ ಲೈಸೆನ್ಸ್ (ಡ್ರೈವಿಂಗ್ ಲೈಸೆನ್ಸ್) ನೀಡಲಾಗುವುದು. ಸಾರ್ವಜನಿಕರಿಗೆ ಉತ್ತಮ ಸೇವೆ ಮತ್ತು ಪಾರದರ್ಶಕತೆ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಹತ್ತೇ ನಿಮಿಷದಲ್ಲಿ ಡ್ರೈವಿಂಗ್ ಟೆಸ್ಟ್ ಫಿನಿಶ್!
ಸುಮಾರು 7 ಕೋಟಿ ವೆಚ್ಚದಲ್ಲಿ ಈ ಹೈ‑ಟೆಕ್ ಟ್ರ್ಯಾಕ್ ನಿರ್ಮಿಸಲಾಗಿದೆ. ಈ ಕೇಂದ್ರದಲ್ಲಿ, ವಾಹನ ಚಾಲನೆ ಪರೀಕ್ಷೆ ಕೇವಲ ಹತ್ತು ನಿಮಿಷಗಳಲ್ಲಿ ಪೂರ್ಣಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ದ್ವಿಚಕ್ರ ವಾಹನಗಳಿಗೆ ಏಕಕಾಲದಲ್ಲಿ ಪರೀಕ್ಷೆ ನಡೆಸಲು 2 ಪಥ, ಲಘು ವಾಹನಗಳಿಗೆ ಏಕಕಾಲದಲ್ಲಿ ಐದು ಪಥಗಳಲ್ಲಿ ಪರೀಕ್ಷೆ ನಡೆಯಲಿದೆ. ಒಂದೊಂದು ಹಂತ ಪೂರ್ಣಗೊಳಿಸಲು 2-3 ನಿಮಿಷಗಳು ಸಾಕಾಗುತ್ತವೆ. 10ರಿಂದ 12 ನಿಮಿಷದಲ್ಲಿ ಒಬ್ಬರ ಪರೀಕ್ಷೆ ಪೂರ್ಣಗೊಳ್ಳಲಿದೆ. ಎಲ್ಎಲ್ಆರ್ ಅವಧಿ ಪೂರ್ಣಗೊಂಡ ಬಳಿಕ ಆರ್ಟಿ ಒದಲ್ಲಿ ಆನ್ ಲೈನ್ನಲ್ಲಿ ದಿನ ನಿಗದಿಪಡಿಸಿಕೊಳ್ಳಬೇಕು. ನಿಗದಿತ ದಿನದಂದು ಈ ಸೆಂಟರ್ಗೆ ತೆರಳಿ ವಾಹನ ಚಾಲನೆ ಪರೀಕ್ಷೆಗೆ ಹಾಜರಾಗಬೇಕು. ಪಥದಲ್ಲಿ ಅಲ್ಲಲ್ಲಿ ಸೆನ್ಸಾರ್ ಆಧರಿತ ಪೋಲ್ಗಳಿದ್ದು, ವಾಹನ ಚಾಲನೆ ವೇಳೆ ಅವುಗಳಿಗೆ ತಾಗುವುದನ್ನು ಫೌಲ್ ಎಂದು ಪರಿಗಣಿಸಲಾಗುತ್ತದೆ. ನಿಗದಿತ ಸಂಖ್ಯೆಗಿಂತ ಹೆಚ್ಚು ಫೌಲ್ ಆದರೆ ಅನುತ್ತೀರ್ಣರಾಗುತ್ತಾರೆ. ಅವರು ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷೆಯಲ್ಲಿ ಉತ್ತೀರ್ಣರಾದಲ್ಲಿ ಕೆಲವೇ ನಿಮಿಷಗಳಲ್ಲಿ ಆನ್ ಲೈನ್ ನಲ್ಲಿ ಲೈಸನ್ಸ್ ಅಂಗೀಕೃತಗೊಳ್ಳುತ್ತದೆ. ಸ್ಥಳದಲ್ಲೇ ಕಾರ್ಡ್ ವಿತರಿಸುವ ವ್ಯವಸ್ಥೆ ಇದ್ದು, ತಪ್ಪಿದ್ದಲ್ಲಿ ಪೋಸ್ಟಲ್ ಮೂಲಕವೂ ರವಾನಿಸಲಾಗುತ್ತದೆ.