ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ರೋಷನ್ ಸಲ್ಡಾನ ವಿರುದ್ಧ ಜಾರಿ ನಿರ್ದೇಶನಾಲಯ (ED) ಕ್ರಮ ಕೈಗೊಂಡಿದೆ. ಮಂಗಳೂರು ಉಪವಲಯ ಕಚೇರಿಯ ಅಧಿಕಾರಿಗಳು ರೋಷನ್ ಸಲ್ಡಾನ ಹಾಗೂ ಆತನ ಪತ್ನಿ ಢಫ್ನಿ ನೀತು ಅವರ ಹೆಸರಿನ ಮನೆ ಮತ್ತು ಬ್ಯಾಂಕ್ ಖಾತೆ ಸೇರಿ ಸುಮಾರು ₹2.85 ಕೋಟಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿದ್ದಾರೆ.

ಮಂಗಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಆಧಾರದ ಮೇಲೆ ಇ.ಡಿ. ತನಿಖೆ ಆರಂಭಿಸಲಾಗಿದ್ದು, ಪ್ರಾಥಮಿಕವಾಗಿ ಹಣ ಅಕ್ರಮವಾಗಿ ವರ್ಗಾವಣೆಗೊಂಡಿರುವುದು ಪತ್ತೆಯಾಗಿದೆ. ರೋಷನ್ ಸಲ್ಡಾನ ಕೋಟಿಗಟ್ಟಲೆ ಸಾಲ ಕೊಡಿಸುವ ಆಮಿಷವೊಡ್ಡಿ ದೇಶದ ವಿವಿಧ ಭಾಗಗಳ ಉದ್ಯಮಿಗಳು ಹಾಗೂ ಐಷಾರಾಮಿ ವ್ಯಕ್ತಿಗಳಿಂದ 200 ಕೋಟಿಗೂ ಹೆಚ್ಚು ರೂಪಾಯಿ ವಂಚನೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಸಾಲ ಸಿಗುತ್ತದೆ ಎಂಬ ನಂಬಿಕೆ ಮೂಡಿಸಿ, ಪ್ರತಿ ಪ್ರಕರಣದಲ್ಲೂ ಐದುದಿಂದ ಹತ್ತು ಕೋಟಿ ರೂಪಾಯಿ ಮುಂಗಡ ಹಣ ಪಡೆದು ಮೋಸ ಮಾಡುತ್ತಿದ್ದನೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉದ್ಯಮಿಗಳ ದೂರಿನ ಆಧಾರದ ಮೇಲೆ ಕಳೆದ ಜುಲೈ 17ರಂದು ಮಂಗಳೂರು ಪೊಲೀಸರು ರೋಷನ್ ಸಲ್ಡಾನನನ್ನು ಬಂಧಿಸಿದ್ದರು. ತನಿಖೆ ಮುಂದುವರಿದಿದ್ದು, ಇ.ಡಿ. ಮುಂದಿನ ದಿನಗಳಲ್ಲಿ ಆರ್ಥಿಕ ವ್ಯವಹಾರಗಳ ಕುರಿತು ಹೆಚ್ಚಿನ ವಿಚಾರಣೆ ನಡೆಸಲಿದೆ.
ಐಶಾರಾಮಿ ಬಂಗಲೆ, ಲಕ್ಸುರಿ ಲೈಫ್ ಸ್ಟೈಲ್ ಮೂಲಕವೇ ವಂಚನೆ!

ಇಂಪೊರ್ಟೆಡ್ ಸ್ಕಾಚ್, ವಿಸ್ಕಿ ಗಳು, ಅರಮನೆ ಮಾದರಿಯ ಮೀಟಿಂಗ್ ಹಾಲ್. ಆತನದ್ದು ಮನೆಯಲ್ಲ.. ಮಾಯಾ ಬಝಾರ್. ಅಲ್ಲಿ ಕಣ್ಣಿಗೆ ಕಾಣೋದೆಲ್ಲ ನಿಜವಲ್ಲ. ಮುಟ್ಟಿದೆಲ್ಲಾ ಚಿನ್ನವಲ್ಲ. ವಾರ್ಡ್ರೋಬ್ ವಾರ್ಡ್ರೋಬ್ ಅಲ್ಲ ಬಾತ್ ರೂಮ್ ಬಾತ್ ರೂಮ್ ಅಲ್ಲ. ಎಲ್ಲವೂ ಅಯೊಮಯ. ಕೋಟಿ ಕುಳಗಳಿಗೆ ಪಂಗನಾಮ ಹಾಕಲೆಂದೇ ಕಟ್ಟಿರುವ ಮಾಯಾ ಬಝಾರ್ ಅದು. ಇದು ಮಾಯಾಬಝಾರು ಕುಣಿವಾಗ ಹುಷಾರು ಹಾಡಿಗೆ ಹೇಳಿ ಮಾಡಿಸಿದ ಮನೆಯದು. ವಂಚನೆಗೆಂದೇ ನಿರ್ಮಿಸಿದ್ದ ಐಶಾರಾಮಿ ಬಂಗಲೆ. ಕೇವಲ ಬಂಗಲೆಯಲ್ಲ. ಬಂಗಲೆಯೊಳಗೆ ನಿಗೂಢ ತಾಣ. ಈ ಬಂಗಲೆಯ ಮೂಲೆ ಮೂಲೆಯಲ್ಲೂ ಅಚ್ಚರಿಯಿದೆ. ಇದೆ ಅಚ್ಚರಿ ಕಂಡ ಬಹುಕೋಟಿ ಉದ್ಯಮಿಗಳು ವಂಚಕನ ಬಣ್ಣದ ಮಾತು, ಐಷಾರಾಮಿ ಲೈಫ್ ಸ್ಟೈಲ್ಗೆ ಮರುಳಾಗಿ ಪಂಗನಾಮ ಹಾಕಿಸಿಕೊಂಡಿದ್ದರು. ಈ ಕಥೆಯ ವಿಲನ್ ರೋಶನ್ ಸಲ್ದನಾ. ಉದ್ಯಮಿಯೋರ್ವನಿಗೆ ಸಾಲ ನೀಡುವ ನೆಪದಲ್ಲಿ ಲಕ್ಷ ಲಕ್ಷ ಹಣ ಪೀಕಿ ವಂಚನೆಗೈದ ಆರೋಪದಡಿ ಅಂದರ್ ಆಗಿದ್ದ. ಕೇವಲ ಈ ಉದ್ಯಮಿ ಮಾತ್ರವಲ್ಲ ರಿಯಲ್ ಎಸ್ಟೇಟ್ ಮತ್ತು ಸಾಲ ಕೊಡಿಸುವ ನೆಪದಲ್ಲಿ ಈ ವಂಚಕ ವಿವಿಧ ಉದ್ಯಮಿಗಳಿಗೆ ಸುಮಾರು ಇನ್ನೂರು ಕೋಟಿಗೂ ಅಧಿಕ ಹಣ ವಂಚಿಸಿದ್ದಾನೆ ಅನ್ನೊ ಮಾಹಿತಿ ಇತ್ತು. ಇದೇ ಮಾದರಿಯಲ್ಲಿ ಈತನ ವಂಚನೆಗೆ ಸಿಲುಕಿದ ಅಂಧ್ರ ಮೂಲದ ಉದ್ಯಮಿಯೋರ್ವರು ನೀಡಿದ ದೂರಿನ ಆಧಾರದಲ್ಲಿ ಮಂಗಳುರು ಪೊಲೀಸರು ಖೆಡ್ಡ ತೋಡಿದ್ದರು. ರೋಶನ್ ತಂಗಿದ್ದ ಮನೆ ಮೇಲೆ ದಾಳಿ ನಡೆಸಿದ ಪೊಲೀಸರೆ ದಂಗಾಗಿ ಹೋಗಿದ್ದರು. ಮಂಗಳೂರಿನ ಜೆಪ್ಪಿನಮೊಗರುವಿನಲ್ಲಿರುವ ಈ ಲಕ್ಸುರಿ ವಿಲ್ಲಾದಲ್ಲಿ ರೋಶನ್ ತಂಗಿದ್ದ. ಅದು ಮನೆಯಲ್ಲ, ಮಾಯಾಲೋಕವಿದೆ. ಇದೇ ವಿಲ್ಲಾ ತೋರಿಸಿ ಉದ್ಯಮಿಗಳನ್ನ ಪುಸಾಲಾಯಿಸುತ್ತಿದ್ದ ರೋಶನ್ ತಾನೊಬ್ಬ ಕೋಟ್ಯಾಧಿಪತಿ ಎಂದು ನಂಬಿಸುತ್ತಿದ್ದ. ಪೊಲೀಸರು ರೈಡ್ ಮಾಡುವಾಗಲೂ ರೋಶನ್ ಇದೇ ವಿಲ್ಲಾದಲ್ಲಿ ಮಲ್ಯೇಷಿಯನ್ ಲೇಡಿ ಜೊತೆ ಜಾಲಿ ಜಾಲಿ ಮೂಡ್ನಲ್ಲಿದ್ದ. ಪೊಲೀಸರು ದಾಳಿ ಮಾಡುತ್ತಿದ್ದಾರೆ ಅನ್ನೋ ವಿಚಾರ ತಿಳಿದಿದ್ದೇ ತಡ ಇದೇ ಮನೆಯಲ್ಲಿರುವ ರಹಸ್ಯ ಅಡಗು ತಾಣದಲ್ಲಿ ರೋಶನ್ ಬಚ್ಚಿಟ್ಟುಕೊಳ್ಳುತ್ತಾನೆ. ಆಂಧ್ರಪ್ರದೇಶ ಮೂಲದ ಉದ್ಯಮಿಗೆ ಸಾಲ ಕೊಡುವ ನೆಪದಲ್ಲಿ ಲಕ್ಷ ಲಕ್ಷ ಪಂಗನಾಮ ಹಾಕಿ ರೋಶನ್ ತಗಲಾಕಿಕೊಂಡಿದ್ದ. ಸಿಲ್ಕ್ ತಯಾರಿಕಾ ಕಂಪೆನಿಯ ಉದ್ಯಮಿಯೋರ್ವರು ಉದ್ಯಮ ಅಭಿವೃದ್ಧಿಪಡಿಸಲು ಮತ್ತು ಗೃಹಕೃತ್ಯದ ಖರ್ಚುಗಳಿಗೆ ರೋಶನ್ ಬಳಿ ಸಾಲದ ಮೊರೆ ಹೋಗಿದ್ದರು. ಬೆಂಗಳುರು ಮೂಲದ ಫೈನಾನ್ಸ್ ಕನ್ಸಲ್ಟೆನ್ಸಿ ನಡೆಸುತ್ತಿದ್ದ ವಿಮಲೇಶ್ ಎಂಬಾತ ಉದ್ಯಮಿಯನ್ನ ರೋಶನ್ಗೆ ಪರಿಚಯ ಮಾಡಿಸುತ್ತಾನೆ. ಚಿತ್ರದುರ್ಗದ ನಗರದ ಕೋಟೆ ರಸ್ತೆಯಲ್ಲಿರುವ ಸಾಯಿ ಫೈನಾನ್ಸ್ ಮ್ಯಾನ್ಯೆಜಿಂಗ್ ಡೈರೆಕ್ಟರ್ ಆಗಿದ್ದ ರೋಶನ್ ನನ್ನ ಭೇಟಿ ಮಾಡುತ್ತಾರೆ. ನಾವು ನಿಮಗೆ ಸಾಲ ಮಂಜೂರು ಮಾಡುತ್ತೇವೆ ಆದರೆ ನೀವು ಸ್ಟ್ಯಾಂಪ್ ಡ್ಯೂಟಿಗೆ 49 ಸಾವಿರ ರೂಪಾಯಿ ಹಣ ಕಟ್ಟಬೇಕು ಎಂದು ರೋಶನ್ ಹೇಳಿದ್ದಾನೆ. ಇದೆ ರೀತಿ 80 ಸ್ಟ್ಯಾಂಪ್ ಡ್ಯೂಟಿ ಅವಶ್ಯಕತೆ ಇದೆ ಎಂದಿದ್ದ ರೋಶನ್ ಉದ್ಯಮಿಯನ್ನ ನಂಬಿಸಿ 40 ಲಕ್ಷ ಹಣ ಪಡೆದಿದ್ದ. 15ದಿನಗಳಲ್ಲಿ ಸಾಲ ಮಂಜೂರಾತಿ ಮಾಡುತ್ತೇನೆ ಎಂದು ನಂಬಿಸಿ ಎಸ್ಕೇಪ್ ಆಗಿದ್ದ. ರೋಶನ್ ನಾಪತ್ತೆ ಬೆನ್ನಲ್ಲೆ ಚಿತ್ರದುರ್ಗಾ ಪೊಲೀಸ್ ಠಾಣೆಗೆ ಉದ್ಯಮಿ ದೂರು ನೀಡುತ್ತಾರೆ. ವಿಮಲೇಶ್ ಬಂಧಿಸಿ ಸದ್ಯ ಮಂಗಳೂರಿನಲ್ಲಿ ರೋಶನ್ಗೆ ಪೊಲೀಸರು ಖೆಡ್ಡಾ ತೋಡಿದ್ದರು.
