ಉಡುಪಿ: ಕುಂಜಾಲುವಿನಲ್ಲಿ ನಡೆದ ಗೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವಂತಹ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.


ಶರಣ್ ಪಂಪ್ ವೆಲ್ ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಭಂಗ ತರುವಂತೆ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ತನಿಖೆಯು ಪೂರ್ಣಗೊಳ್ಳುವ ಮೊದಲೇ ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಗಲಭೆ-ಗೊಂದಲ ಉಂಟು ಮಾಡುವಂತಿದ್ದು ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವಂತಹ ಪ್ರಚೋದನಾಕಾರಿ ಹೇಳಿಕೆ ನೀಡಿರುವುದಾಗಿ ದೂರಲಾಗಿದೆ. ಅದರಂತೆ ಆರೋಪಿ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 353(2) BNS ರಂತೆ ಪ್ರಕರಣ ದಾಖಲಾಗಿದೆ.

ಎಫ್ಐಆರ್ ನಲ್ಲಿ ಏನಿದೆ?
ಶರಣ್ ಪಾಪವೆಲ್ ಟೈಮ್ ಚಾನೆಲ್ ನಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಕುಂಜಾಲುವಿನಲಿ ನಡೆದ ಗೋ ಹತ್ಯೆಯನ್ನು ಉದ್ದೇಶಿಸಿ ಇಸ್ಲಾಮಿಕ್ ಮತೀಯವಾದಿಗಳು ಹಿಂದೂ ವಿರೋಧಿ, ದೇಶ ವಿರೋದಿ ಚಟುವಟಿಕೆಗಳಿಗೆ ಹಿಂದೂಗಳನ್ನು ಬಳಸುವಂತಹ ಹೊಸ ದಾರಿಯನ್ನು ಹುಡುಕಿದ್ದಾರೆ, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಕಳಸದ ಇಬ್ಬರು ಅಮಾಯಕ ಹಿಂದೂ ಯುವಕರನ್ನು ಬಳಸಿದ್ದಾರೆ, ಕುಂಜಾಲುವಿನಲ್ಲಿ ನಡೆದ ಗೋ ಹತ್ಯೆ ಪ್ರಕರಣದಲ್ಲಿ 6 ಜನ ಹಿಂದೂಗಳನ್ನು ಬಂಧನ ಮಾಡಿದ್ದಾರೆ. ಇದರ ಹಿಂದೆ ಒಂದು ವ್ಯವಸ್ಥಿತವಾದಂತಹ ಗೋ ಮಾಫಿಯಾದ ದಂಧೆ ಇದೆ, ಜಿಲೆಯಲ್ಲಿ ಗಲಭೆಯನ್ನು ಸೃಷ್ಟಿ ಮಾಡಲು ಇಸ್ಲಾಮಿಕ್ ಮತೀಯ ವಾದಿಗಳು ಸ್ಥಳೆಯರನ್ನು ಬಳಸಿದ್ದಾರೆಂಬ ಸಂಶಯ ವ್ಯಕ್ತವಾಗುತ್ತಾ ಇದೆ ಎಂಬುದಾಗಿ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದು, ಆರೋಪಿ ಶರಣ್ ಪಂಪ್ ವೆಲ್ ನು ನೀಡಿದ ವಿಡಿಯೋ ವಿವಿಧ ವಾಟ್ಸಪ್ ಗ್ರೂಪ್ ಗಳಿಗೆ ಹರಿಬಿಟ್ಟಿದ್ದು, ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಭಂಗ ತರುವಂತೆ ಪತ್ರಿಕಾ ಗೋಷ್ಟಿಯಲ್ಲಿ ಪ್ರಕರಣದ ತನಿಖೆಯು ಪೂರ್ಣಗೊಳ್ಳುವ ಮೊದಲೇ ಸಾರ್ವಜನಿಕರಲ್ಲಿ, ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರಲಿ ಗಲಭೆ ಗೊಂದಲ ಉಂಟು ಮಾಡುವಂತಿದೆ. ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವಂತಹ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.