ಮಂಗಳೂರು: ವಾಟ್ಸಪ್ ಗ್ರೂಪ್ಗಳ ಮೂಲಕ ಕೋಮುದ್ವೇಷ ಮತ್ತು ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಓರ್ವನನ್ನ ಪೊಲೀಸರು ಬಂಧಿಸಿದ್ದಾರೆ.

ರಾಮ್ ಪ್ರಸಾದ್ ಅಲಿಯಾಸ್ ಪೋಚ (42) ಬಂಧಿತ ಆರೋಪಿ. ದೂರುದಾರ ರಾಜೇಶ್ ಎಂಬವರು ಕುಳಾಯಿ, ಹೊನ್ನಕಟ್ಟೆ ಪ್ರದೇಶದ ನಿವಾಸಿಯಾಗಿದ್ದು, RV Enterprises ಎಂಬ ಸಂಸ್ಥೆ ನಿರ್ವಹಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಕೆಲ ದುಷ್ಕರ್ಮಿಗಳು ವಾಟ್ಸಪ್ನಲ್ಲಿ ರಾಜೇಶ್ ವಿರುದ್ಧ ಕೋಮುದ್ವೇಷ ಉಂಟುಮಾಡುವ ಉದ್ದೇಶದಿಂದ ಸುಳ್ಳು ಮಾಹಿತಿಗಳನ್ನು ಹರಡಿದ್ದಾರೆ. ವಾಟ್ಸಪ್ ಸಂದೇಶದಲ್ಲಿ , ಅವರು 20ಕ್ಕೂ ಹೆಚ್ಚು ಯುವತಿಯರನ್ನು ಮತಾಂತರ ಮಾಡಿಸಿದ್ದಾರೆ. ಬ್ಲೂ ಫಿಲಂ CD ಮಾರಾಟ ಮಾಡಿದ್ದಾರೆ. ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯರನ್ನು ಮತಾಂತರ ಮಾಡಿಸಿದ್ದಾರೆ. 24 ವರ್ಷ ಪ್ರಾಯದ ಹಿಂದೂ ಯುವತಿಯನ್ನು ತಮ್ಮ ತಮ್ಮನಿಗೆ ಮದುವೆ ಮಾಡಿಸಲು ಯತ್ನಿಸುತ್ತಿದ್ದಾರೆ. ಆ ಯುವತಿಗೆ ದೇವಸ್ಥಾನಕ್ಕೆ ಹೋಗುವುದು ನಿಲ್ಲಿಸಿ, ಚರ್ಚ್ಗೆ ಪ್ರಾರ್ಥನೆಗೆ ಕಡ್ಡಾಯವಾಗಿ ಹಾಜರಾಗಿಸುತ್ತಿದ್ದಾರೆ ಎಂದು ಬರೆಯಲಾಗಿತ್ತು. ಈ ಎಲ್ಲಾ ಆರೋಪಗಳನ್ನು ಸುಳ್ಳು ಹಾಗೂ ಸಂಚುಪೂರಿತವೆಂದು ತಿಳಿದ ರಾಜೇಶ್ ಅವರು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ BNS ಸೆಕ್ಷನ್ 352, 353(1), 353(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರಾಮ್ ಪ್ರಸಾದ್ ಅಲಿಯಾಸ್ ಪೋಚ (42) ಎಂಬಾತನ ಬಂಧಿಸಿ ಮಂಗಳೂರು 2ನೇ ಜೆಎಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇನ್ನೋರ್ವ ಆರೋಪಿಯಾಗಿರುವ ಲೋಕೇಶ್ ಕೋಡಿಕೆರೆ ಈಗಾಗಲೇ ಪಡುಬಿದ್ರಿ ಪೊಲೀಸ್ ಠಾಣೆಯ ಪ್ರಕರಣ ಸಂಖ್ಯೆ 81/2025 ರಲ್ಲಿ ಬಂಧಿತನಾಗಿದ್ದು, ಪ್ರಸ್ತುತ ಉಡುಪಿ ಜಿಲ್ಲಾ ಕಾರಾಗೃಹ, ಹಿರಿಯಡ್ಕದಲ್ಲಿ ಇದ್ದಾನೆ. ಅವನನ್ನ ಬಾಡಿ ವಾರಂಟ್ ಮುಖಾಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.