ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ಅಕ್ರಮ ದನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ಸಂಘಟನೆ ವಿರುದ್ಧ ಹೊಸ ಆರೋಪಗಳು ಕೇಳಿಬಂದಿವೆ. ಅಕ್ಟೋಬರ್ 20ರಂದು ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಆರೋಪಿ ಅಬ್ದುಲ್ಲಾ (40, ಕಾಸರಗೋಡು ಮೂಲದ) ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದ ಪ್ರಕರಣದ ನಂತರ ಎಸ್ಡಿಪಿಐ ನಾಯಕರು ಆರೋಪಿ ಪರವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವೈರಲ್ ಮಾಡಿರೋ ಆರೋಪ ಕೇಳಿ ಬಂದಿದೆ.

ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹೆಸರಿನಲ್ಲಿ ರಶೀದಿ (ಕ್ರಮ ಸಂಖ್ಯೆ 27653 ಮತ್ತು 27654) ಸೃಷ್ಟಿಸಿ, ಆರೋಪಿ ಅಬ್ದುಲ್ಲಾ ಅಧಿಕೃತವಾಗಿ ಜಾನುವಾರು ಖರೀದಿಸಿದ್ದಾನೆ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ಈ ನಕಲಿ ದಾಖಲೆಗಳನ್ನು State Office SDPI Karnataka ಎಂಬ “X” ಖಾತೆಯಲ್ಲೂ ಹಂಚಲಾಗಿದ್ದು, ಎಸ್ಡಿಪಿಐ ರಾಜ್ಯಾಧ್ಯಕ್ಷರ ಖಾತೆ ಹಾಗೂ ಕೆಲ ದ.ಕ. ಜಿಲ್ಲಾ ನಾಯಕರ ಖಾತೆಗಳಿಂದಲೂ ಪೋಸ್ಟ್ಗಳು ವೈರಲ್ ಆಗಿವೆ. ಪುತ್ತೂರು ಗ್ರಾಮಾಂತರ ಠಾಣೆಯ ತನಿಖಾಧಿಕಾರಿಗಳ ವಿಚಾರಣೆಯಲ್ಲಿ, ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಈ ರಶೀದಿಗಳು ನಕಲಿ ಎಂದು ದೃಢಪಡಿಸಿದ್ದಾರೆ. ಅಲ್ಲದೇ ಜಾನುವಾರು ಸಂತೆ ಶುಕ್ರವಾರದಂದು ಮಾತ್ರ ನಡೆಯುತ್ತದೆ ಎಂಬ ಮಾಹಿತಿ ನೀಡಲಾಗಿದೆ.
ಆರ್ಟಿಓ ಹಾಗೂ ಪಶು ವೈದ್ಯಾಧಿಕಾರಿಗಳಿಂದ ಸಹ ಯಾವುದೇ ಅಧಿಕೃತ ಅನುಮತಿ ನೀಡಲಾಗಿರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ದಾಖಲೆ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ Thejasnews.com ಮಾಲಕ/ಸಂಪಾದಕ ಮತ್ತು Sadath Bajathur ಎಂಬವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಕರಣವನ್ನು ಬಿಎನ್ಎಸ್ ಕಲಂಗಳು 233, 240, 338, 353(1)(b), 192, 61(2)(b), 238(c) ಅಡಿಯಲ್ಲಿ ದಾಖಲಿಸಲಾಗಿದೆ.

ಈಶ್ವರಮಂಗಲ ಪ್ರದೇಶದಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಅಬ್ದುಲ್ಲಾ ಎಂಬಾತ 10 ಜಾನುವಾರುಗಳನ್ನು ಈಚರ್ ವಾಹನದಲ್ಲಿ ಸಾಗಿಸುತ್ತಿದ್ದಾಗ, ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಪ್ರಯತ್ನಿಸಿದ್ದ. ಹೀಗಾಗಿ ಪಿಎಸ್ಐ ಜಂಬೂರಾಜ್ ಅವರು ಎಚ್ಚರಿಕೆಯಾಗಿ ಎರಡು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ಆರೋಪಿಯ ಕಾಲಿಗೆ ತಗುಲಿತ್ತು.
ಈ ಕುರಿತು ಬಂಟ್ವಾಳ ಗ್ರಾಮಾಂತರ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಅವರಿಂದ ತನಿಖೆ ನಡೆಯುತ್ತಿದ್ದು, ನಕಲಿ ದಾಖಲೆ ರಚನೆ ಹಾಗೂ ಸುಳ್ಳು ಸುದ್ದಿ ಪ್ರಸಾರ ಸಂಬಂಧ ತನಿಖೆ ಮುಂದುವರೆದಿದೆ.
