ಮಂಗಳೂರು: ಅವಿವಾಹಿತ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿರೋಡಿನಲ್ಲಿ ನಡೆದಿದೆ. ರಾಜಸ್ಥಾನ ಮೂಲದ ನಟವರ್ ಸಿಂಗ್ (27) ಮೃತಪಟ್ಟ ಯುವಕ.

ಬಿಸಿರೋಡಿನ ಹೃದಯಭಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಚರಿಸುತ್ತಿರುವ ನವರತನ್ ಇಲೆಕ್ಟ್ರಿಕಲ್ ಅಂಗಡಿಯಲ್ಲಿ ಮ್ಯಾನೇಜರ್ ಆಗಿದ್ದ ಈತ ಸೌಮ್ಯ ಸ್ವಭಾವದವನಾಗಿದ್ದು, ಸ್ಥಳೀಯವಾಗಿ ಚಿರಪರಿಚಿತನಾಗಿದ್ದ. ಈತನಿಗೆ ಆರು ತಿಂಗಳ ಹಿಂದೆ ಹೃದಯ ನೋವು ಕಂಡಿದ್ದು,ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದೆ. ಇದೀಗ ಜುಲೈ9 ರಂದು ರಾತ್ರಿ ಸುಮಾರು 7 ಗಂಟೆಯ ವೇಳೆ ಈತನಿಗೆ ತಲೆಸುತ್ತು ಬಂದಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ಹೋಗಿದ್ದರು, ಆಸ್ಪತ್ರೆಯ ಮೆಟ್ಟಿಲು ಹತ್ತುವ ವೇಳೆ ಬಿದಿದ್ದು,ಬಳಿಕ ಆತ ಸಾವನ್ನಪ್ಪಿದ ಬಗ್ಗೆ ಕುಟುಂಬ ಮೂಲಗಳು ತಿಳಿಸಿವೆ. ಈತ ಮೂಲತಃ ರಾಜಸ್ಥಾನದವನಾಗಿದ್ದರಿಂದ ಮೃತದೇಹವನ್ನು ವಿಮಾನದ ಮೂಲಕ ಅಲ್ಲಿಗೆ ಕೊಂಡುಹೋಗಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.