ಉಪ್ಪಿನಂಗಡಿ: ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ನೀಡಿ ಆರೋಪಿಗೆ ಜಾಮೀನು ದೊರಕುವಂತೆ ವಂಚನೆ ನಡೆಸಿದ ಪ್ರಕರಣದಲ್ಲಿ ಆರೋಪಿ ಬಂಧಿಸಲಾಗಿದೆ.

ಪುತ್ತೂರಿನ ನಿವಾಸಿಯೊಬ್ಬರ ಮಾಲೀಕತ್ವದಲ್ಲಿರುವ ಜಮೀನಿನ ಆರ್ಟಿಸಿಯನ್ನು ತನ್ನದೇ ಆಸ್ತಿ ದಾಖಲೆ ಎಂದು ನಂಬಿಸಿ, ಅದನ್ನು ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದ.ಕ. ಜಿಲ್ಲೆ ಮಂಗಳೂರು ನ್ಯಾಯಾಲಯಕ್ಕೆ ಸಲ್ಲಿಸಿ, ಆರೋಪಿಗೆ ಜಾಮೀನು ದೊರಕುವಂತೆ ಮಾಡಿದ ಪ್ರಕರಣ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಸಂಬಂಧ ಉಪ್ಪಿನಂಗಡಿ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 417, 419, 467, 468, 471 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ವೇಳೆ ನಕಲಿ ದಾಖಲೆ ಸೃಷ್ಟಿಸಿ ಪಿರ್ಯಾದುದಾರರೆಂದು ಹೇಳಿಕೊಂಡು, ನಕಲಿ ಸಹಿ ಮಾಡಿ ನ್ಯಾಯಾಲಯವನ್ನು ವಂಚಿಸುವ ಉದ್ದೇಶದಿಂದ ಭದ್ರತಾ ಪತ್ರ ಸಲ್ಲಿಸಿದ ಆರೋಪ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಅಬ್ದುಲ್ ಹಾಶೀಮ್ (34), ಪಡುವನ್ನೂರು ಗ್ರಾಮ, ಪುತ್ತೂರು, ಎಂಬಾತನನ್ನು ಬಂಧಿಸಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
















