
ನಿಷೇಧಿತ ಪಿಎಫ್ಐ ಸದಸ್ಯರಿಂದಲೇ ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ: ಎನ್ಐಎ ಚಾರ್ಜ್ಶೀಟ್ ನಲ್ಲಿ ಬಹಿರಂಗ!

ಮಂಗಳೂರು: ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಮಾಜಿ ಸದಸ್ಯರ ಕೈವಾಡವಿದೆ ಎಂಬುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನ್ನ ಚಾರ್ಜ್ಶೀಟ್ನಲ್ಲಿ ಬಹಿರಂಗಪಡಿಸಿದೆ. ಎನ್ಐಎ 11 ಮಂದಿ ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಅನ್ನು ಬೆಂಗಳೂರು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.
2025ರ ಮೇ 1ರಂದು ಬಜಪೆ ಬಳಿ ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆಗೀಡಾದರು. ಪ್ರಕರಣದ ಗಂಭೀರತೆಯನ್ನು ಮನಗಂಡ ಗೃಹ ಇಲಾಖೆಯು ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸಿತ್ತು. ಎನ್ಐಎ ತನಿಖೆಯಿಂದ ಈ ಹತ್ಯೆಯ ಹಿಂದೆ ದೊಡ್ಡ ಮಟ್ಟದ ಸಂಘಟಿತ ಸಂಚು ಇರುವುದು ಸ್ಪಷ್ಟವಾಗಿದೆ. ತನಿಖಾ ವರದಿಯ ಪ್ರಕಾರ, ಸುಹಾಸ್ ಶೆಟ್ಟಿಯ ಚಟುವಟಿಕೆಗಳ ಮೇಲೆ ಆರೋಪಿಗಳು ಹಲವು ತಿಂಗಳ ಕಾಲ ಕಣ್ಣಿಟ್ಟಿದ್ದರು.
ಹತ್ಯೆಯ ದಿನ, ಆರೋಪಿಗಳು ಎರಡು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದು, ಸುಹಾಸ್ ಶೆಟ್ಟಿ ಪ್ರಯಾಣಿಸುತ್ತಿದ್ದ ಇನೋವಾ ಕಾರನ್ನು ಹಿಂಬಾಲಿಸಿ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು, ಮತ್ತೊಂದು ಕಾರಿನಿಂದ ಮುಂಭಾಗ ತಡೆದು ತಪ್ಪಿಸಿಕೊಳ್ಳುವ ಅವಕಾಶವಿಲ್ಲದಂತೆ ಮಾಡಿದ್ದಾರೆ. ಅದಾದ ಬಳಿಕ, ಸುಹಾಸ್ ಶೆಟ್ಟಿ ಹಾಗೂ ಅವರ ಸ್ನೇಹಿತರ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿ ಸುಹಾಸ್ ಹತ್ಯೆ ಮಾಡಿದ್ದಾರೆ.
ಎನ್ಐಎ ತನಿಖೆ ಪ್ರಕಾರ, ಈ ಸಂಚಿನ ಮುಖ್ಯ ರೂವಾರಿ ಅಬ್ದುಲ್ ಸಫ್ವಾನ್ ಅಲಿಯಾಸ್ ಕಳವಾರು ಸಫ್ವಾನ್ ಆಗಿದ್ದು,
ಈತ ನಿಷೇಧಿತ ಪಿಎಫ್ಐ ಸಂಘಟನೆಯ ಹಳೆಯ ಸದಸ್ಯ ಎನ್ನುವುದು ಬಹಿರಂಗವಾಗಿದೆ. ಉಳಿದಂತೆ ನಿಯಾಜ್ ಅಲಿಯಾಸ್ ನಿಯಾ, ಮಹಮ್ಮದ್ ಮುಸಾಮಿರ್ ಅಲಿಯಾಸ್ ಮುಸಾಮೀರ್, ಮಹಮ್ಮದ್ @ ಮುಜಮ್ಮಿಲ್, ನೌಶಾದ್ ಅಲಿಯಾಸ್ ವಾಮಂಜೂರ್ ನೌಶಾದ್ @ ಚೊಟ್ಟೆ ನೌಶಾದ್ ಕೂಡ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಎನ್ಐಎ ಹೇಳಿದೆ. ಸಂಚಿನ ಹಣಕಾಸು ವ್ಯವಸ್ಥೆಯನ್ನು ಆದಿಲ್ ಮಹರೂಫ್ (ಅಲಿಯಾಸ್ ಆದಿಲ್) ಮಾಡಿದ್ದು ತನಿಖೆಯಿಂದ ದೃಢವಾಗಿದೆ.
ಹತ್ಯೆ ಸಂಚು ರೂಪಿಸುವಲ್ಲಿ ಆತ ಪ್ರಮುಖ ಪಾತ್ರವಹಿಸಿದ್ದಾನೆ ಎಂದು ಎನ್ಐಎ ಚಾರ್ಜ್ಶೀಟ್ ಹೇಳುತ್ತದೆ. ಈತನೂ ನಿಷೇಧಿತ ಪಿಎಫ್ಐ ಸದಸ್ಯನಾಗಿದ್ದಾನೆ. ಎನ್ಐಎ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಕಲಂದರ್ ಶಾಫಿ ಅಲಿಯಾಸ್ ಮಂಡೆ ಶಾಫಿ, ಎಂ. ನಾಗರಾಜ ಅಲಿಯಾಸ್ ನಾಗ @ ಅಪ್ಪು ರಂಜಿತ್, ಮಹಮ್ಮದ್ ರಿಜ್ವಾನ್ ಅಲಿಯಾಸ್ ರಿಜ್ಜು, ಅಜರುದ್ದೀನ್ ಅಲಿಯಾಸ್ ಅಜರ್ @ ಅಜ್ಜು, ಅಬ್ದುಲ್ ಖಾದರ್ ಅಲಿಯಾಸ್ ನೌಫಲ್ ಹಾಗೂ ಇನ್ನೂ ಒಬ್ಬ ಆರೋಪಿಯಾದ ಅಬ್ದುಲ್ ರಜಾಕ್ ವಿರುದ್ಧ ತನಿಖೆ ಮುಂದುವರಿಯುತ್ತಿದೆ.











