ಕರ್ನಾಟಕ
ಬಂಟ್ವಾಳ: ಮದುವೆಗೆ ತೆರಳುತ್ತಿದ್ದ ವಾಹನ ಬಿಸಿಲೆ ಘಾಟ್ನಲ್ಲಿ ಪಲ್ಟಿಯಾಗಿ ಸಂಭವಿಸಿದ ಭಾರೀ ಅಪಘಾತದ ಬಳಿಕ ಗಾಯಾಳುಗಳನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ಗೆ ಸ್ಕೂಟಿ ಸವಾರನೊಬ್ಬ ಅಡ್ಡಬಂದು ಹುಚ್ಚಾಟ ನಡೆಸಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಳಿ ನಡೆದಿದ್ದು, ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಹುಚ್ಚಾಟ ನಡೆಸಿದ ಸವಾರನನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಮಹಮ್ಮದ್ ಮನ್ಸೂರು (38) ಎಂದು ಗುರುತಿಸಲಾಗಿದೆ. ಆತನ ಸ್ಕೂಟಿ ಸಂಖ್ಯೆ KA-19-EK-0696.

ಘಟನೆಯ ವಿವರ:
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಪುತ್ತೂರು ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ತುರ್ತಾಗಿ ಸಾಗಿಸಲಾಗುತ್ತಿತ್ತು. ಈ ವೇಳೆ ಅಂಬ್ಯುಲೆನ್ಸ್ಗೆ ಸೈರನ್, ಹಾರ್ನ್ ಹಾಕಿದರೂ ಗಮನ ಕೊಡದೇ ಸ್ಕೂಟಿ ಸವಾರನೊಬ್ಬ ಸುಮಾರು 4 ಕಿ.ಮೀ.ವರೆಗೆ ಅಡ್ಡಬಂದು ಅಂಬ್ಯುಲೆನ್ಸ್ ಚಾಲನೆಯಲ್ಲಿ ಅಡಚಣೆ ಉಂಟುಮಾಡಿದ್ದಾನೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ ಸೆಕ್ಷನ್ 110 ಮತ್ತು 125 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಂಬ್ಯುಲೆನ್ಸ್ನ ಸಹಚಾಲಕ ಕಾರ್ತಿಕ್ ಮೊಬೈಲ್ನಲ್ಲಿ ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಸೆರೆಹಿಡಿದಿದ್ದು, ಅದು ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಬಿಸಿಲೆ ಘಾಟ್ನಲ್ಲಿ ಮದುವೆಗೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿಯಾದ ನಂತರ ನಡೆದಿದೆ. ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ಸಭಾಭವನದಲ್ಲಿ ನಡೆಯುತ್ತಿದ್ದ ಮದುವೆಗೆ ಅವರು ತೆರಳುತ್ತಿದ್ದರು.













